Urdu   /   English   /   Nawayathi

ಕಾಂಗ್ರೆಸ್ 135ನೇ ಸಂಸ್ಥಾಪನಾ ದಿನ : ದೇಶವ್ಯಾಪಿ ಭಾರತ ಉಳಿಸಿ ರ‍್ಯಾಲಿ

share with us

ನವದೆಹಲಿ: 28 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಭಾರತದ ಅತ್ಯಂತ ಹಳೆ ರಾಷ್ಟ್ರೀಯ ರಾಜಕೀಯ ಪಕ್ಷವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(ಐಎನ್‍ಸಿ) ಸಂಸ್ಥಾಪನೆಯಾಗಿ ಇಂದಿಗೆ 135 ವರ್ಷ ಪೂರ್ಣಗೊಂಡಿದೆ. ಈ ನಿಮಿತ್ತ ದೇಶಾದ್ಯಂತ ಇಂದು ಕಾಂಗ್ರೆಸ್ ಪಕ್ಷವು ಭಾರತ ಉಳಿಸಿ-ಸಂವಿಧಾನ ರಕ್ಷಿಸಿ ರ್ಯಾಲಿ ನಡೆಸಿತು. ಪಕ್ಷದ ಅನೇಕಾನೇಕ ಮುಖಂಡರು ಮತ್ತು ಅಸಂಖ್ಯಾತ ಕಾರ್ಯಕರ್ತರು ಧ್ವಜ ಮೆರವಣಿಗೆಯಲ್ಲಿ ಭಾಗವಹಿಸಿದರು. ರಾಜಧಾನಿ ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಎಐಸಿಸಿ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಸೋನಿಯಾಗಾಂಧಿ ಪಕ್ಷದ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶವು ಎಲ್ಲಕ್ಕಿಂತಲೂ ಮಿಗಿಲಾದುದು. ಕಾಂಗ್ರೆಸ್ ಪಕ್ಷಕ್ಕೆ ಭಾರತವೇ ಮೊದಲ ಆದ್ಯತೆ. ದೇಶಕ್ಕಾಗಿ ತ್ಯಾಗ ಎಲ್ಲಕ್ಕಿಂತಲೂ ದೊಡ್ಡದು ಎಂದರು. ಎಐಸಿಸಿ ಮಾಜಿ ಅಧ್ಯಕ್ಷ ಮತ್ತು ಸಂಸದ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಪಕ್ಷದ ಧುರೀಣರಾದ ಗುಲಾಂ ನಬಿ ಆಜಾದ್, ಅಧೀರ್ ರಂಜನ್ ಚೌಧರಿ, ಆನಂದಶರ್ಮ, ಅಹಮದ್ ಪಟೇಲ್ ಮೊದಲಾದವರು ಪಾಲ್ಗೊಂಡರು. ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಎಂಪಿಸಿಸಿ ಕಚೇರಿಯಲ್ಲಿ ಪಕ್ಷದ ಧ್ವಜಾರೋಹಣದ ನಂತರ ಆಗಸ್ಟ್ ಕ್ರಾಂತಿ ಮೈದಾನದಿಂದ ಲೋಕಮಾನ್ಯ ತಿಲಕ್ ಪ್ರತಿಭೆವರೆಗೆ ರ್ಯಾಲಿ ನಡೆಯಿತು. ಪಕ್ಷದ ಮುಖಂಡರು ಮತ್ತು ಅಸಂಖ್ಯಾತ ಕಾರ್ಯಕರ್ತರು ಭಾಗವಹಿಸಿದ್ದರು. ದೇಶದ ಎಲ್ಲ ರಾಜ್ಯಗಳ ರಾಜಧಾನಿಯ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಗಳಲ್ಲಿ ಪಕ್ಷದ ಧ್ವಜಾರೋಹಣ ನಂತರ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಭಾರತ ಉಳಿಸಿ-ಸಂವಿಧಾನ ರಕ್ಷಿಸಿ ಸಂದೇಶದೊಂದಿಗೆ ಫ್ಲಾಗ್ ಮಾರ್ಚ್‍ಗಳನ್ನು ನಡೆಸಿದರು.

ಈ, ಸಂ ವರದಿ  

Prayer Timings

Fajr فجر
Dhuhr الظهر
Asr أسر
Maghrib مغرب
Isha عشا