Urdu   /   English   /   Nawayathi

ಚಾರ್ಮಾಡಿ ಘಾಟ್‌ನಲ್ಲಿ ನಿರಂತರ ಮಳೆ

share with us

ಪುತ್ತೂರು/ಬೆಳ್ತಂಗಡಿ: 04 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಪ್ರವಾಹದಿಂದ ತತ್ತರಿಸಿದ್ದ ಬೆಳಂಗಡಿ ಪ್ರದೇಶದಲ್ಲಿ ಸೋಮವಾರದ ನಿರಂತರ ಮಳೆ ಮತ್ತೆ ನೆರೆ ಭೀತಿ ಉಂಟು ಮಾಡಿತ್ತು. ಆದರೆ, ಮಂಗಳವಾರ ಮಳೆ ತೀವ್ರತೆ ಕಡಿಮೆಯಾಗಿ ಜನ ನಿಟ್ಟಿಸಿರುಬಿಟ್ಟರು. ಸೋಮವಾರ ಚಾರ್ಮಾಡಿ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದ ಮಳೆ ಪರಿಣಾಮ ಅಂತರಬೈಲು ಮೃತ್ಯುಂಜಯ ಹೊಳೆ ಸೇರಿದಂತೆ ಕುಕ್ಕಾವು ನೇತ್ರಾವತಿ ಮತ್ತೆ ಉಕ್ಕಿ ಹರಿದಿತ್ತು. 20 ದಿನಗಳ ಹಿಂದೆ ಪ್ರವಾಹ ಬಂದು ಹಾನಿಯಾದ ಪ್ರದೇಶವಾದ ಅಂತರಬೈಲು, ಪರ್ಲಾಣಿ, ಕುಕ್ಕಾವು, ಹೊಸಮನೆ, ಕಕ್ಕೆನಾಜೆ ಮುಂತಾದ ಪ್ರದೇಶಗಳಲ್ಲಿ ಭಾನುವಾರ ನದಿಗಳು ಅಪಾಯದ ಮಟ್ಟದಲ್ಲಿ ಹರಿದಿದ್ದು, ಭಾರಿ ಗಾತ್ರದ ಮರಗಳು ಕೂಡ ನೀರಿನಲ್ಲಿ ತೇಲಿಬಂದಿದ್ದವು. 2-3 ದಿನಗಳಿಂದ ಚಾರ್ಮಡಿ ಘಾಟ್ ಪ್ರದೇಶದಲ್ಲಿ ನಿರಂತರ ಮಳೆಯಾಗಿದ್ದರಿಂದ ನೇತ್ರಾವತಿ ನದಿ ನೀರಿನ ಮಟ್ಟ ಮತ್ತೆ ಏರಿಕೆಯಾಗಿದೆ. ಅಣಿಯೂರು ಹಳ್ಳ, ಸುನಾಳ ಹೊಳೆ, ನೆರಿಯ ಹೊಳೆ, ಎಳನೀರು ಹೊಳೆಗಳು ಚಾರ್ಮಾಡಿ ಘಾಟಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಾಗಿದ್ದು, ಇದರ ತಳಭಾಗದ ಪ್ರದೇಶಗಳಲ್ಲಿ ಮತ್ತೆ ನೆರೆ ಆವರಿಸುವ ಭಯ ಕಾಡಿದೆ.

ಕುಕ್ಕಾವು ಸಂಪರ್ಕ ಆತಂಕ
ಕುಕ್ಕಾವು ಸಮೀಪದ ಕಲ್ಲೊಲೆ ಸತೀಶ್, ಯಶೋಧರ ಅವರ ಮನೆಗೆ ಸೋಮವಾರ ಮತ್ತೆ ನೀರು ನುಗ್ಗಿದೆ. ಕುಕ್ಕಾವು, ಕೇಳ್ತಾಜೆ, ಮಾಪಲಾಡಿ, ಮಂಟಮೆ, ಹೊಸಮನೆ, ಕಕ್ಕೆನಾಜೆ, ಅಣಿಲ, ಅಡ್ಯರಬೈಲು, ಮುಂತಾದೆಡೆ ಕೆಲ ಮನೆಗಳಿಗೂ ನೀರು ತುಂಬಿದೆ. ಕುಕ್ಕಾವು ಸೇತುವೆ ಬಳಿ ಹಿಂದೆ ಕೊಚ್ಚಿಹೋದ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಕಾರ್ಯ ನಡೆಸಿದ್ದು, ನದಿಯ ಇಕ್ಕಡೆಗಲ್ಲಿ ಮಣ್ಣು ತುಂಬಿಸುವ ಕಾರ್ಯ ಪೂರ್ಣಗೊಂಡಿತ್ತು. ಸೋಮವಾರ ಅಂತರಬೈಲು, ಕೊಳಂಬೆ ಮುಂತಾದೆಡೆ ನೀರು ತುಂಬಿ ಹರಿದಿದ್ದು ಯಾವುದೇ ಹಾನಿಯಾಗಲಿಲ್ಲ. ಆದರೆ ನದಿ ತುಂಬಿ ಹರಿಯುತ್ತಿದ್ದ ವೇಳೆ ಸ್ಥಳೀಯರು ಭಯಗೊಂಡಿದ್ದು, ಬಳಿಕ ಜಲ ಮಟ್ಟ ಕಡಿಮೆಯಾಗಿದೆ. ಕುಕ್ಕಾವು-ದಿಡುಪೆ ಸಂಪರ್ಕ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಮಳೆ ಮುಂದುವರಿದರೆ ಮತ್ತೆ ಅಪಾಯದ ಎದುರಾಗುವ ಸಾಧ್ಯತೆ ಇದೆ ಎಂದು ಸ್ಥಳಿಯರು ಆತಂಕ ವ್ಯಕ್ತಪಡಿಸಿದ್ದಾರೆ.

ಅರಣಪಾದೆ ಚೌಟಾಜೆ ಸಂಪರ್ಕ ರಸ್ತೆ ಕಡಿತ
ಸೋಮವಾರ ಸಂಜೆ ಸುರಿದ ಮಳೆಗೆ ಏಕಾಏಕಿ ನೀರು ಏರಿದ್ದರಿಂದ ಜನರು ಆತಂಕ ಮನೆಮಾಡಿದೆ. ಸಂಜೆ 3.30ಕ್ಕೆ ಅರಣೆಪಾದೆ ಅಂತರಬೈಲು ಪ್ರದೇಶದಲ್ಲಿ ಒಮ್ಮಿಂದೊಮ್ಮೆ ನೀರು ಏರಿದ್ದು ಅರಣಪಾದೆ ಚೌಟಾಜೆ ಸಂಪರ್ಕ ರಸ್ತೆ ಕಡಿತಗೊಂಡಿದೆ. ಸಂಜೆ ಸ್ಥಳೀಯ ಸ್ವಯಂಸೇವಕರು ರಸ್ತೆ ದುರಸ್ತಿ ಕಾರ್ಯ ನಡೆಸಿದರು. ಸೋಮವಾರ ಸಂಜೆ ಶಾಸಕ ಹರೀಶ್ ಪೂಂಜ ಅಂತರಬೈಲು ಪ್ರದೇಶಕ್ಕೆ ಭೇಟಿ ನೀಡಿದರು.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا