Urdu   /   English   /   Nawayathi

ಸೈಬರ್ ವಂಚನೆ ಓರ್ವ ಸೆರೆ

share with us

ಮಂಗಳೂರು: 06 ಜುಲೈ 2019 (ಫಿಕ್ರೋಖಬರ್ ಸುದ್ದಿ) ಫೈನಾನ್ಸ್‌ನಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತೇವೆ ಎಂದು ಕರೆ ಮಾಡಿ ಹಣ ಪಡೆದು ವಂಚಿಸಿದ ಪ್ರಕರಣವನ್ನು ಮಂಗಳೂರು ಸೈಬರ್ ಕ್ರೈಂ ಪೊಲೀಸರು ನವದೆಹಲಿ ಪೊಲೀಸರ ಸಹಕಾರದಿಂದ ಪತ್ತೆ ಮಾಡಿ ಆರೋಪಿಯನ್ನು ಬಂಧಿಸಿ, ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮೂಲತಃ ಉತ್ತರ ಪ್ರದೇಶದ ತಾಂಡ ನಿವಾಸಿ, ನವದೆಹಲಿ ಸೌತ್‌ವೆಸ್ಟ್‌ನ ಜಗದಂಬಾ ವಿಹಾರ್ ಬಳಿ ವಾಸವಿದ್ದ ಯೂಸುಫ್ ಖಾನ್ (29) ಬಂಧಿತ ಆರೋಪಿ. ಈತನ ಸಹಚರರಾದ ನೌಷಾದ್ ಮತ್ತು ಪ್ರಭಾಕರ ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪ್ರಕರಣ ವಿವರ: ಭಾರತಿ ಫೈನಾನ್ಸ್‌ನ ನೇಹಾ ಎಂದು ಪರಿಚಯಿಸಿಕೊಂಡ ಮಹಿಳೆ ಏ.8ರಂದು ಕರೆ ಮಾಡಿದ್ದಳು. ಕಡಿಮೆ ಬಡ್ಡಿ ದರದಲ್ಲಿ 2 ಲಕ್ಷ ರೂ. ಸಾಲ ಕೊಡುವುದಾಗಿ ತಿಳಿಸಿದ್ದಳು. ನಿಜವೆಂದು ನಂಬಿ ಆಕೆ ತಿಳಿಸಿದಂತೆ ಸಾಲದ ಸೆಕ್ಯೂರಿಟಿ ಚಾರ್ಜ್, ಇನ್ಸೂರೆನ್ಸ್ ಇತ್ಯಾದಿ ಒಟ್ಟು 1.70 ಲಕ್ಷ ರೂ. ಅವರು ತಿಳಿಸಿದ ವಿವಿಧ ಖಾತೆಗಳಿಗೆ ಜಮಾ ಮಾಡಿ ಮೋಸ ಹೋಗಿರುವುದಾಗಿ ಪಂಜಿಮೊಗರು ವಿವೇಕ ನಗರ ನಿವಾಸಿ ಕಾರ್ತಿಕ್ ಪೂಜಾರಿ(24) ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸೈಬರ್ ಕ್ರೈಂ ಪೊಲೀಸರು ವಂಚನೆಗೆ ಬಳಸಿದ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಸಂಗ್ರಹಿಸಿ ನವದೆಹಲಿಯ ಜನಕಪುರಿ ಪರಿಸರ ಹಾಗೂ ಇತರ ಕಡೆಗಳಲ್ಲಿ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದರು. ನವದೆಹಲಿ ಪೊಲೀಸರ ಸಹಕಾರ ಪಡೆದು ಆರೋಪಿಗಳನ್ನು ಪತ್ತೆ ಮಾಡಲಾಗಿದೆ. ಆರೋಪಿ ಗ್ರಾಹಕರಿಗೆ ಹಲವು ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುವ ಏಜೆಂಟ್ ಆಗಿ ವ್ಯವಹಾರ ಮಾಡಿಕೊಂಡಿದ್ದ. ಈತ ನಕಲಿಯಾಗಿ ಭಾರತಿ ಫೈನಾನ್ಸ್ ಲಿಮಿಟೆಡ್‌ನ ಹೆಸರಿನಲ್ಲಿ ವೆಬ್‌ಸೈಟ್ ಮಾಡಿದ್ದ. ಈ ವೆಬ್‌ಸೈಟ್ ಮೂಲಕ ಈತನನ್ನು ಸಂಪರ್ಕಿಸುವ ಗ್ರಾಹಕರಿಗೆ ಈ ಫೈನಾನ್ಸ್‌ನಿಂದ 5 ಶೇಕಡ ಬಡ್ಡಿ ದರದಲ್ಲಿ ಸಾಲ ನೀಡುತ್ತೇವೆ ಎಂದು ನಂಬಿಸುತ್ತಿದ್ದ. ಅವರಿಂದ ಆಧಾರ್ ಕಾರ್ಡ್, ಪಾನ್ ಕಾರ್ಡ್, ಭಾವಚಿತ್ರ, ಆದಾಯ, ವೇತನ ಪ್ರಮಾಣಪತ್ರ, ಬ್ಯಾಂಕ್ ಖಾತೆ ವಿವರಗಳನ್ನು ವಾಟ್ಸಾಪ್, ಇಮೇಲ್ ಮೂಲಕ ಪಡೆದು ನಂತರ ದಾಖಲೆ ನೀಡಿದ ಗ್ರಾಹಕರಿಗೆ ಸಂಸ್ಥೆಯಿಂದ ವೆರಿಫಿಕೇಶನ್ ಕರೆ ಮಾಡುತ್ತಿದ್ದ. ಸಾಲ ಮಂಜೂರಾತಿ ಪ್ರಮಾಣಪತ್ರವನ್ನು ಇಮೇಲ್ ಮೂಲಕ ಕಳುಹಿಸಿ ಗ್ರಾಹಕರನ್ನು ನಂಬಿಸುತ್ತಿದ್ದ. ಅವರಿಗೆ ಈ ಸಾಲವನ್ನು ಸಂದಾಯ ಮಾಡಬೇಕಾದರೆ ಸೆಕ್ಯುರಿಟಿ ಚಾರ್ಜ್, ಸರ್ವಿಸ್ ಚಾರ್ಜ್, ಇನ್ಸೂರೆನ್ಸ್ ಚಾರ್ಜ್, ಡಿಡಿ ಚಾರ್ಜ್ ಮೊದಲಾದ ಕಾರಣ ಹೇಳಿ ಅವರಿಂದ ದೊಡ್ಡ ಮೊತ್ತದ ಹಣವನ್ನು ಖಾತೆಗೆ ಜಮಾ ಮಾಡಿಸಿಕೊಂಡು ವಂಚಿಸುತ್ತಿದ್ದ ಎಂದು ಸಂದೀಪ್ ಪಾಟೀಲ್ ವಿವರಿಸಿದರು. ಸೈಬರ್ ಕ್ರೈಂ ಪಿಎಸ್‌ಐ ಚಂದ್ರಶೇಖರಯ್ಯ, ಸಿಸಿಆರ್‌ಬಿ ಘಟಕದ ಪಿಎಸ್‌ಐ ಶ್ಯಾಮ್ ಸುಂದರ್, ಸಿಬ್ಬಂದಿ ರಾಜೇಂದ್ರ, ಗಣಕಯಂತ್ರ ವಿಭಾಗದ ಮನೋಜ್ ಹಾಗೂ ಸೈಬರ್ ಕ್ರೈಂ ಪೊಲೀಸ್ ಠಾಣಾ ಎಎಸ್‌ಐ ಓಂದಾಸ್, ಎಚ್‌ಸಿಗಳಾದ ದಿನೇಶ್ ಬೇಕಲ್, ಕುಮಾರ್, ಮಾಯಾ ಪ್ರಭು, ಕಾನ್‌ಸ್ಟೆಬಲ್‌ಗಳಾದ ವಿಜಯ್ ಶೆಟ್ಟಿ, ಗೃಹರಕ್ಷಕ ವಿದೀಪ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ತಂಡಕ್ಕೆ ಸೂಕ್ತ ಬಹುಮಾನ ಹಾಗೂ ಪ್ರಶಂಸನಾ ಪತ್ರ ನೀಡುವುದಾಗಿ ಆಯುಕ್ತರು ತಿಳಿಸಿದರು.

31 ಮೊಬೈಲ್, 2 ಲ್ಯಾಪ್‌ಟಾಪ್ ವಶ: ಆರೋಪಿಯನ್ನು ಪತ್ತೆ ಮಾಡಿ ಆತನ ಕಚೇರಿಗೆ ದಾಳಿ ಮಾಡಿದಾಗ ಅಲ್ಲಿ ವಂಚನೆ ಮಾಡಲು ಬಳಸುತ್ತಿದ್ದ 31 ಮೊಬೈಲ್ ಫೋನ್, 2 ಲ್ಯಾಪ್‌ಟಾಪ್, ಸಾಲದ ಬಗ್ಗೆ ಮಾಹಿತಿ ಬರೆದಿರುವ 10 ಪುಸ್ತಕಗಳು, 70 ಸಾವಿರ ರೂ. ವಶಪಡಿಸಿಕೊಳ್ಳಲಾಗಿದೆ. ಮಂಗಳೂರು ಮಾತ್ರವಲ್ಲದೆ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳ ಸಾರ್ವಜನಿಕರಿಗೆ ವಂಚನೆ ನಡೆಸಿರುವುದು ಗಮನಕ್ಕೆ ಬಂದಿದೆ ಎಂದು ಆಯುಕ್ತರು ತಿಳಿಸಿದರು.

400 ಮಂದಿಗೆ ಕರೆ ಮಾಡಿದ್ದರು: ನವದೆಹಲಿಯಲ್ಲಿದ್ದುಕೊಂಡು ದೇಶದ ಉದ್ದಗಲಕ್ಕೂ ಆರೋಪಿಗಳು ವಂಚನಾ ಜಾಲ ಬೀಸಿದ್ದರು. ಕಳೆದ 6 ತಿಂಗಳಿನಿಂದ ಸುಮಾರು 400ಕ್ಕಿಂತಲೂ ಅಧಿಕ ಮಂದಿಗೆ ಕರೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಏರ್‌ಲೈನ್ ಕಂಪನಿಯ ನಕಲಿ ವೆಬ್‌ಸೈಟ್ ಮಾಡಿಕೊಂಡು ಹಣ ವಂಚನೆ ಮಾಡುತ್ತಿರುವ ಬಗ್ಗೆ 2 ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا