Urdu   /   English   /   Nawayathi

‘ನರ ಬಲಿಗೆ ಅನುಮತಿ ನೀಡಿ, ನನ್ನ ಮಗನನ್ನೇ ಮೊದಲು ವಧೆ ಮಾಡ್ತೀನಿ ‘

share with us

ಬೆಗೆಸರೈ(ಬಿಹಾರ): 02 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ವಿಲಕ್ಷಣ ಪ್ರಕರಣವೊಂದರಲ್ಲಿ ಬಿಹಾರದ ಬೆಗುಸರೈ ಜಿಲ್ಲೆಯ ಮಂತ್ರವಾದಿಯೊಬ್ಬ ಕ್ಷುದ್ರ ದೇವತೆಯನ್ನು ಸಂತೃಪ್ತಗೊಳಿಸಲು ನರ ಬಲಿಗೆ ಅನುಮತಿ ನೀಡುವಂತೆ ಜಿಲ್ಲಾಡಳಿತವನ್ನು ಕೋರಿದ್ದಾನೆ.  ಈ ಸಂಬಂಧ ಆತ ಬೆಗುಸರೈನ ಉಪ ವಿಭಾಗೀಯ ಅಧಿಕಾರಿ(ಎಸ್‍ಡಿಒ) ಅವರಿಗೆ ಪತ್ರವೊಂದನ್ನು ಬರೆದಿದ್ದಾನೆ.  ಮಂತ್ರವಾದಿ ಸುರೇಂದ್ರ ಸಿಂಗ್ ಬರೆದಿರುವ ಈ ಪತ್ರದಿಂದ ಜಿಲ್ಲಾಡಳಿತ ಬೆಚ್ಚಿಬಿದ್ದಿದೆ. ಮಾನವ ಬಲಿ ಅಪರಾಧವಲ್ಲ. ಇದಕ್ಕೆ ಅನುಮತಿ ನೀಡಬೇಕು. ಇದಕ್ಕೆ ಅವಕಾಶ ದೊರೆತರೆ ಇಂಜಿನಿಯರ್ ಆಗಿರುವ ನನ್ನ ಮಗನಿಂದಲೇ ನರಬಲಿ ಆರಂಭಿಸುತ್ತೇನೆ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ. ಸಿಂಗ್ ಜಿಲ್ಲಾಡಳಿತಕ್ಕೆ ಜ.29ರಂದು ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರೂ, ಇಂಥ ಯಾವುದೇ ಪತ್ರ ತಮಗೆ ಬಂದಿಲ್ಲ ಎಂದು ಎಸ್‍ಡಿಒ ಸಂಜೀವ್ ಕುಮಾರ್ ತಿಳಿಸಿದ್ದಾರೆ. ಇದೊಂದು ಗಂಭೀರ ವಿಷಯ. ನರಬಲಿ ಅಕ್ರಮ ಮತ್ತು ಕಾನೂನು ಬಾಹಿರ. ಈ ಪತ್ರಕ್ಕಾಗಿ ಮತ್ತು ಇದನ್ನು ಬರೆದ ಮಂತ್ರವಾದಿಗಾಗಿ ನಾವು ಶೋಧ ನಡೆಸುತ್ತಿದ್ದೇವೆ. ಈತನ ವಿರುದ್ಧ ಸೂಕ್ತ ಕಾನೂನು ಕೈಗೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ. ಅಪರಿಚಿತ ಸಂಘಟನೆಯಾದ ಬಿಂದು ಮಾ ಮಾನವ್ ಕಲ್ಯಾಣ್ ಸಂಸ್ಥೆ ಲೆಟರ್‍ಹೆಡ್‍ನಲ್ಲಿ ಸಿಂಗ್ ಈ ಪತ್ರ ಬರೆದಿದ್ದಾನೆ. ಈ ಸಂಘವು ಸಹಕಾರ ಸಂಘಗಳ ನೋಂದಣಿ ಕಾಯ್ದೆ ಅಡಿ ನೋಂದಾಯಿತವಾಗಿದ್ದು, ತಾನು ಇದರ ಮುಖ್ಯಸ್ಥ ಎಂದು ಆತ ಹೇಳಿಕೊಂಡಿದ್ದಾನೆ. ಈತ ತನ್ನ ಪತ್ರದ ಬಗ್ಗೆ ಸ್ಥಳೀಯ ಪತ್ರಕರ್ತರೊಂದಿಗೆ ಮಾತನಾಡುತ್ತಿರುವ ವಿಡಿಯೋ ತುಣುಕು ಸಹ ವೈರಲ್ ಆಗಿದೆ.  ನರಬಲಿ ಅಪರಾಧವಲ್ಲ, ಮಾನವಬಲಿ ನೀಡುವಂತೆ ಕಾಮಕ್ಯ ದೇವತೆ ನನಗೆ ತಿಳಿಸಿದ್ದು, ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ನನ್ನ ಮಗನಿಂದಲೇ ಮೊದಲ ನರಬಲಿ ಆರಂಭಿಸುತ್ತೇನೆ. 

ನನ್ನ ಮಗನಿಗೆ ದೇವಸ್ಥಾನ ನಿರ್ಮಿಸಲು ಹಣ ಕೇಳಿದೆ. ಆತ ಕೊಡಲಿಲ್ಲ. ಅವನು ನನ್ನ ಮಗನಲ್ಲ, ಆತ ರಾವಣ ಅವನನ್ನು ಮೊದಲು ದೇವರಿಗೆ ನರಬಲಿ ಕೊಡುತ್ತೇನೆ ಎಂದು ಮಂತ್ರವಾದಿ ಹೇಳಿರುವ ದೃಶ್ಯ ಈ ವಿಡಿಯೋದಲ್ಲಿದೆ. ಈತ ವಾಸಿಸುತ್ತಿರುವ ಗ್ರಾಮದ ನಿವಾಸಿಗಳು ಇವನೊಬ್ಬ ಹುಚ್ಚ ಮತ್ತು ದುಷ್ಟ. ತನ್ನ ಬಗ್ಗೆ ಪ್ರಚಾರ ಗಿಟ್ಟಿಸಲು ಅನೇಕ ವಾಮಮಾರ್ಗಗಳನ್ನು ಅನುಸರಿಸುತ್ತಿದ್ದಾನೆ ಎಂದು ಹೇಳಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا