Urdu   /   English   /   Nawayathi

ರಾಹುಲ್ ಜತೆ 'ಕೈ'ಜೋಡಿಸಿದ ಚಂದ್ರಬಾಬು ನಾಯ್ಡು: ದೇಶ ಉಳಿಸಲು ಒಂದಾಗಿದ್ದೇವೆ - ಆಂಧ್ರ ಸಿಎಂ

share with us

ನವದೆಹಲಿ: 01 ನವೆಂಬರ್ (ಫಿಕ್ರೋಖಬರ್ ಸುದ್ದಿ) ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲಿಲ್ಲ ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತಿರುಗಿಬಿದ್ದು ಎನ್​ಡಿಎ ಮೈತ್ರಿಕೂಟದಿಂದ ಹೊರಬಂದಿದ್ದ ಟಿಡಿಪಿ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್  ಚಂದ್ರಬಾಬು ನಾಯ್ಡು ಅವರು ಗುರುವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್​ ಗಾಂಧಿ ಜೊತೆ ಕೈಜೋಡಿಸಿದ್ದಾರೆ. ಈಗಾಗಲೇ ತೆಲಂಗಾಣ ವಿಧಾಸಭೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿರುವ ಚಂದ್ರಬಾಬು ನಾಯ್ಡು ಅವರು, ಆ ಮೈತ್ರಿಯನ್ನು ಲೋಕಸಭೆ ಚುನಾವಣೆಗೂ ವಿಸ್ತರಿಸಲು ಮುಂದಾಗಿದ್ದು, ಈ ಸಂಬಂಧ ಇಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.

ರಾಹುಲ್ ಗಾಂಧಿ ಭೇಟಿಯ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಂಧ್ರ ಸಿಎಂ, ನಾವು ಹಿಂದಿನದ್ದನ್ನು ಮರೆತು ಈಗ ದೇಶ ಉಳಿಸಿ, ಪ್ರಜಾತಂತ್ರ ರಕ್ಷಿಸುವ ಕೆಲಸಕ್ಕೆ ಬದ್ಧವಾಗಿದ್ದು, ಅದಕ್ಕಾಗಿಯೇ ನಾವು ಒಂದಾಗಿದ್ದೇವೆ ಎಂದರು.

ಎಲ್ಲಾ ಪ್ರತಿಪಕ್ಷಗಳು ಈಗ ಒಂದಾಗುವ ಅಗತ್ಯ ಇದೆ. ರಾಹುಲ್ ಗಾಂಧಿ ಅವರು ಪ್ರತಿಪಕ್ಷಗಳ ಪ್ರಮುಖ ನಾಯಕ. ಪ್ರತಿಪಕ್ಷಗಳನ್ನು ಒಗ್ಗೂಡಿಸಲು ನಾವು ಯತ್ನಿಸಬೇಕಾಗಿದೆ ಎಂದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸುವ ಮೂಲಕ ದೇಶದ  ಭವಿಷ್ಯವನ್ನು ಕಾಪಾಡಬೇಕು. ಈ ಮೂಲಕ ಸಂವಿಧಾನ ಮತ್ತು ಪ್ರಜಾತಂತ್ರ ರಕ್ಷಿಸಬೇಕಾಗಿದೆ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಈ ವೇಳೆ ಮಾತನಾಡಿದ ರಾಹಲ್ ಗಾಂಧಿ, ಚಂದ್ರಬಾಬು ನಾಯ್ಡು ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ನಿರುದ್ಯೋಗ, ಭ್ರಷ್ಟಾಚಾರ, ರಾಫೆಲ್ ಡೀಲ್ ಮತ್ತು ಕೃಷಿ ಕ್ಷೇತ್ರದ ಸಮಸ್ಯೆಗಳು ಸೇರಿದಂತೆ ಹಲವು ವಿಷಯಗಳನ್ನು ಸರ್ಕಾರದ ವಿರುದ್ಧ ಪ್ರಮುಖ ಅಸ್ತ್ರಗಳನ್ನಾಗಿ ಬಳಸಿಕೊಳ್ಳಲಾಗುವುದು ಎಂದರು.

ಮೋದಿ ನೇೃತ್ವದ ಎನ್ ಡಿಎ ಸರ್ಕಾರ ಸುಪ್ರೀಂ ಕೋರ್ಟ್, ಸಿಬಿಐ, ಇಡಿ ಹಾಗೂ ಆರ್​​ಬಿಐ ಅನ್ನು ಹಾಳು ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.

ಇದೇ ವೇಳೆ ಮಾತನಾಡಿದ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು, ಪ್ರಜಾಪ್ರಭುತ್ವ ಉಳಿಸಿ, ದೇಶ ಉಳಿಸಿ ಎನ್ನುವುದು ಈ ಕ್ಷಣದ ಅಗತ್ಯತೆಯಾಗಿದೆ. ಚಂದ್ರಬಾಬು ನಾಯ್ಡು ಅವರು ಎಲ್ಲಾ ಮುಖಂಡರ ಜೊತೆ ಮಾತನಾಡಿ ಸಭೆ ಕರೆಯಲಿದ್ದಾರೆ ಎಂದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا