Urdu   /   English   /   Nawayathi

ಬಾರ್‌ ಮಾಲೀಕನ ಅಪಹರಿಸಿ ಸಿಕ್ಕಿ ಬಿದ್ದ ಗ್ಯಾಂಗ್‌

share with us

ಬೆಂಗಳೂರು: 16 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಬಾರ್‌ ಮಾಲೀಕರೊಬ್ಬರನ್ನು ಅಪಹರಿಸಿ 50 ಲಕ್ಷ ರೂ. ವಸೂಲಿ ಮಾಡುವ ಕುಖ್ಯಾತ ಗ್ಯಾಂಗ್‌ನ ಸಂಚು ವಿಫಲವಾಗಿದ್ದು , ಗ್ಯಾಂಗ್‌ನ ಸದಸ್ಯರು ಪೊಲೀಸರ ಗಾಳಕ್ಕೆ ಬಿದ್ದಿದ್ದಾರೆ. 
ಮುತ್ಯಾಲನಗರದ ನಿವಾಸಿ ವೆಂಕಟೇಶ್‌ ಅಪಹರಣಕ್ಕೆ ಒಳಗಾದವರು. ಆದರೆ ಬೇಡಿಕೆ ಹಣಕ್ಕೆ ಒತ್ತೆ ಇಡುವ ಮೊದಲೇ ಗ್ಯಾಂಗ್‌ನ ಒಬ್ಬಾತ ಪೊಲೀಸರ ಬಲೆಗೆ ಬಿದ್ದಿದ್ದರಿಂದ ಗ್ಯಾಂಗ್‌ನ ಸಂಚು ವಿಫಲವಾಗಿದೆ. ಅಪಹರಣದ ಸೂತ್ರಧಾರ ಯಶವಂತಪುರ ನಿವಾಸಿ ರಘುವೀರ್‌ (22) ಮತ್ತು ಕನಕಪುರದ ಪ್ರಶಾಂತ್‌ (26) ಕುಮಾರಸ್ವಾಮಿ ಲೇಔಟ್‌ ನಿವಾಸಿ ವಿನಯ್‌ಕುಮಾರ್‌ (28), ಇಂದಿರಾನಗರದ ಪ್ರದೀಪ್‌ (30), ಜಯನಗರದ ವಿಶ್ವನಾಥ್‌ (27), ಹಳೆಗುಡ್ಡದಹಳ್ಳಿಯ ವಿಜಯ್‌ಕುಮಾರ್‌ (36), ಕಿಶೋರ್‌ಕುಮಾರ್‌ (24), ಕೊತ್ತೂರಿನ ಮಹೇಶ್‌ (24) ಹಾಗೂ ರಾಘವೇಂದ್ರರಾವ್‌ (28), ವಿಜಯ್‌ಕುಮಾರ್‌ (32) ಬಂಧಿತ ಆರೋಪಿಗಳು. 

ಅಪಹರಣ ಹೇಗೆ ? 

ವೆಂಕಟೇಶ್‌ ಪ್ರತೀದಿನ ಸಂಜೆ ವಾಯು ವಿಹಾರಕ್ಕೆ ಹೋಗುತ್ತಾರೆ ಎನ್ನುವುದನ್ನು ಅರಿತಿದ್ದ ಗ್ಯಾಂಗ್‌ ಸೆ.27ರಂದು ಇನ್ನೋವಾ ಕಾರಿನಲ್ಲಿ ಬಂದು ಅಪಹರಿಸಿತ್ತು. ಮುಸುಕು ಧರಿಸಿದ್ದ ನಾಲ್ವರು ವೆಂಕಟೇಶ್‌ ಅವರನ್ನು ಬಲವಂತವಾಗಿ ಎಳೆದು ಕಾರಿನೊಳಗೆ ಕೂರಿಸಿಕೊಳ್ಳುತ್ತಿದ್ದಾಗಲೇ ಅವರು ಜೋರಾಗಿ ಕಿರುಚಿದ್ದು ಸ್ಥಳೀಯರಿಗೆ ಕೇಳಿಸಿ ಸುಮಾರು ಎಂಟತ್ತು ಮಂದಿ ಸ್ಥಳಕ್ಕೆ ಧಾವಿಸಿದ್ದರು. ಈ ವೇಳೆ ಪಲ್ಸರ್‌ ಬೈಕಿನಲ್ಲಿ ಬಂದ ಇಬ್ಬರು ಸ್ಥಳದಿಂದ ಪರಾರಿ ಆಗುವಂತೆ ಕಾರಿನಲ್ಲಿದ್ದವರಿಗೆ ಅಲರ್ಟ್‌ ಮಾಡಿ ತಾವೂ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆಗ ಬೈಕ್‌ನಲ್ಲಿ ಹಿಂಬದಿ ಕುಳಿತಿದ್ದ ಕನಕಪುರದ ಪ್ರಶಾಂತ್‌ ಆಯತಪ್ಪಿ ಕೆಳಕ್ಕೆ ಬಿದ್ದಿದ್ದ. ಈತನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. 

ವೆಂಕಟೇಶ್‌ ಬಿಡುಗಡೆ 

ತಮ್ಮ ಗ್ಯಾಂಗ್‌ನ ಪ್ರಶಾಂತ್‌ ಸಿಕ್ಕಿ ಬಿದ್ದ ವಿಚಾರ ಬೈಕ್‌ನಲ್ಲಿ ತಪ್ಪಿಸಿಕೊಂಡಿದ್ದವನ ಮೂಲಕ ಕಾರಿನಲ್ಲಿದ್ದವರಿಗೆ ರವಾನೆ ಆಗಿತ್ತು. ಇನ್ನು ಪೊಲೀಸರು ಎಲ್ಲಾ ದಿಕ್ಕಿನಿಂದಲೂ ಬೆನ್ನತ್ತುತ್ತಾರೆ ಎನ್ನುವುದು ಖಚಿತ ಆದ ನಂತರ ಆರೋಪಿಗಳು ವೆಂಕಟೇಶ್‌ ಅವರನ್ನು ನೆಲಮಂಗಲ, ಹೆರುಘಟ್ಟ ಸುತ್ತ ಮುತ್ತ ಒಂದು ಗಂಟೆ ಕಾಲ ಸುತ್ತಾಡಿಸಿ ಅವರ ಮೈಮೇಲಿದ್ದ 300 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಸಿದುಕೊಂಡು ತೋಟವೊಂದರ ಬಳಿ ಕಾರಿನಿಂದ ತಳ್ಳಿ ಪರಾರಿ ಆಗಿದ್ದರು. ಆ ನಂತರ ಪೊಲೀಸರನ್ನು ಸಂಪರ್ಕಿಸಿದ್ದ ವೆಂಕಟೇಶ್‌ ನಡೆದ ಘಟನೆಯನ್ನು ವಿವರಿಸಿದ್ದರು. 

ಮತ್ತಿಕೆರೆ ರಘು ಗ್ಯಾಂಗ್‌ 

ಘಟನಾ ಸ್ಥಳದಲ್ಲೇ ಸಿಕ್ಕಿ ಬಿದ್ದ ಪ್ರಶಾಂತ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಮತ್ತಿಕೆರೆ ರಘು ಅಪಹರಣದ ಸೂತ್ರಧಾರ ಎನ್ನುವುದನ್ನು ಬಾಯಿ ಬಿಟ್ಟಿದ್ದ. ವೆಂಕಟೇಶ್‌ ಅವರು ಹಲವು ಮನೆಗಳನ್ನು ಬಾಡಿಗೆಗೆ ನೀಡಿದ್ದು ಮುತ್ಯಾಲನಗರದಲ್ಲೇ ಇರುವ ಒಂದು ಮನೆಯಲ್ಲಿ ಕೆಲ ತಿಂಗಳುಗಳ ಕಾಲ ಮತ್ತಿಕೆರೆ ರಘುವೀರ್‌ ಎಂಬಾತ ಬಾಡಿಗೆಗೆ ಇದ್ದ . ಆಗ ವೆಂಕಟೇಶ್‌ ಅವರ ಒಟ್ಟು ವ್ಯವಹಾರದ ಬಗ್ಗೆ ತಿಳಿದುಕೊಂಡಿದ್ದ. ಮೊದಲು ಓಲಾ ಚಾಲಕನಾಗಿದ್ದ ಈತ ಹಲವಾರು ಕಳ್ಳತನ ಪ್ರಕಣಗಳಲ್ಲೂ ಆರೋಪಿ ಆಗಿದ್ದ.ತಿಂಗಳಿಗೇ ಲಕ್ಷಾಂತರ ರೂ ಆದಾಯ ಇರುವುದರಿಂದ ಇವರನ್ನು ಅಪಹರಿಸಿದರೆ 50 ಲಕ್ಷ ರೂ ಬೇಡಿಕೆ ಹಣ ವಸೂಲಿ ಮಾಡಬಹುದು ಎಂದು ಸಂಚು ರೂಪಿಸಿದ್ದ. ತಾನು ಕಳ್ಳತನಕ್ಕೆ ಹೋಗುವಾಗ ಪರಿಚಯವಾಗಿದ್ದ ಸಹಚರರನ್ನು ಅಪಹರಣಕ್ಕೆ ಒಪ್ಪಿಸಿದ್ದ. ಇದಕ್ಕಾಗಿ ಒಂದು ಕಾರನ್ನೂ ದರೋಡೆ ಮಾಡಿದ್ದೆವು ಎನ್ನುವ ಸಂಗತಿಯನ್ನು ಪ್ರಶಾಂತ್‌ ಪೊಲೀಸರಿಗೆ ಬಾಯಿ ಬಿಟ್ಟಿದ್ದ. 

ಇನ್ನೋವಾ ದರೋಡೆ 

ಸೆ.27 ರಂದು ವೆಂಕಟೇಶ್‌ ಅವರನ್ನು ಅಪಹರಿಸಲು ನಿರ್ಧರಿಸಿದ್ದ ಗ್ಯಾಂಗ್‌ ಎರಡು ದಿನ ಮೊದಲು ಇನ್ನೋವಾ ಕಾರನ್ನು ದರೋಡೆ ಮಾಡಿದ್ದರು. ಊಟಿ, ಕೇರಳಕ್ಕೆ ಪ್ರವಾಸ ಹೋಗುವ ನೆಪದಲ್ಲಿ ಬಿಟಿಎಂ ಬಡಾವಣೆಯ ಟ್ರಾವೆಲ್ಸ್‌ನಿಂದ ಇನ್ನೋವಾ ಕಾರನ್ನು ಬಾಡಿಗೆಗೆ ಪಡೆದಿದ್ದರು. ಮಂಡ್ಯ ಸಮೀಪ ಕಾರಿನ ಚಾಲಕನಿಗೆ ಮಾರಕಾಸ್ತ್ರ ತೋರಿಸಿ ಬೆದರಿಸಿದ್ದಲ್ಲದೆ ಆತನ ಬಟ್ಟೆ ಬಿಚ್ಚಿಸಿ, ಮೊಬೈಲ್‌ ಕಿತ್ತುಕೊಂಡು ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿ ಆಗಿದ್ದರು. ಸ್ಥಳೀಯರ ನೆರವಿನಿಂದ ಬೆಂಗಳೂರು ತಲುಪಿದ್ದ ಚಾಲಕ ಪೊಲೀಸರಿಗೆ ದೂರು ನೀಡಿದ್ದ. ದರೋಡೆ ಮಾಡಿದ್ದ ಕಾರಿನ ನಂಬರ್‌ ಪ್ಲೇಟ್‌ ಬದಲಿಸಿದ್ದ ಮತ್ತಿಕೆರೆ ರಘು ಗ್ಯಾಂಗ್‌ ಮಂಡ್ಯದಿಂದ ವಾಪಸ್ಸಾಗಿ ವೆಂಕಟೇಶ್‌ ಅವರನ್ನು ಅಪಹರಿಸಿತ್ತು ಎನ್ನುವ ಸಂಗತಿ ಪ್ರಶಾಂತ್‌ ವಿಚಾರಣೆ ವೇಳೆ ತಿಳಿಸಿದ್ದ. 

ಈತ ಕೊಟ್ಟ ಸುಳಿವಿನ ಮೇರೆಗೆ ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದ ಜಾಗಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಉಳಿದ 9 ಮಂದಿಯನ್ನು ಬಂಧಿಸಿ 300 ಗ್ರಾಂ ಚಿನ್ನ, ಅಪಹರಣಕ್ಕೆ ಬಳಸಿದ್ದ ಇನ್ನೋವಾ ಕಾರು ಮತ್ತು ಪಲ್ಸರ್‌ ಬೈಕನ್ನು ವಶಪಡಿಸಿಕೊಂಡಿದ್ದಾರೆ. 

ವಿ, ಕ ವರದಿ  

Prayer Timings

Fajr فجر
Dhuhr الظهر
Asr أسر
Maghrib مغرب
Isha عشا