Urdu   /   English   /   Nawayathi

ಅಮ್ಮನ ಶವವನ್ನು ಗುರುತಿಸಲು ಪೊಲೀಸರಿಗೆ ಸಹಾಯ ಮಾಡಿದ ಪುಟ್ಟ ಮಗು

share with us

ಮುಂಬಯಿ: 21 ಜುಲೈ (ಫಿಕ್ರೋಖಬರ್ ಸುದ್ದಿ) 5 ವರ್ಷದ ಬಾಲಕನೊಬ್ಬನ ಸಹಾಯದಿಂದಾಗಿ ಬೊರಿವಲಿ ಪೊಲೀಸರು ಬರೋಬ್ಬರಿ 17 ತಾಸುಗಳ ಬಳಿಕ ಮಹಿಳೆಯೊಬ್ಬರ ಮೃತದೇಹದ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿದೆ. ಬಾಂದ್ರಾ ರೈಲು ನಿಲ್ದಾಣದಲ್ಲಿ ಗುರುವಾರ ಸಂಜೆ ರೈಲು ಹರಿದು ಸಾವನ್ನಪ್ಪಿದ್ದ ಮಹಿಳೆ ಯಾರೆಂದು ಪತ್ತೆ ಹಚ್ಚಲು ಪೊಲೀಸರು ಪರದಾಡುತ್ತಿದ್ದರು. ಮಹಿಳೆಯ ಶವದೊಂದಿಗೆ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ 5 ವರ್ಷದ ಮಗುವಿನ ಸಹಾಯದಿಂದ ಕೊನೆಗೂ ಪೊಲೀಸರು ಮಹಿಳೆ ಬೊರಿವಲಿ ನಿವಾಸಿ ಎಂಬುದನ್ನು ಕಂಡುಕೊಂಡಿದ್ದಾರೆ. 

ಗುರುವಾರ ರಾತ್ರಿ 8.31ಕ್ಕೆ ಬಾಂದ್ರಾ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 4 ಮತ್ತು 5ರಲ್ಲಿ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಮಹಿಳೆ ಮತ್ತು ಮಕ್ಕಳಿಬ್ಬರನ್ನು ಗಮನಿಸಿದ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಮಹಿಳೆ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು. 2 ವರ್ಷದ ಮಗುವಿನ ತಲೆ, ಮುಖ ಮತ್ತು ಕಣ್ಣಿಗೆ ಗಂಭೀರ ಗಾಯಗಳಾಗಿದ್ದು ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. 5 ವರ್ಷದ ಬಾಲಕ ಪವಾಡಸದೃಶವಾಗಿ ಪಾರಾಗಿದ್ದು ಮುಖದ ಮೇಲೆ ಸಣ್ಣಪುಟ್ಟ ಗಾಯಗಳಾಗಿದ್ದವು. ಶಾಕ್‌ಗೆ ಒಳಗಾಗಿದ್ದ ಆತ ಅಳುತ್ತಲೇ ಇದ್ದ, ಎಂದು ಪೊಲೀಸರು ತಿಳಿಸಿದ್ದಾರೆ. 

ಬಾಲಕ ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳುತ್ತಿದ್ದಂತೆ ಪೊಲೀಸರು ನಿನ್ನ ಮನೆ ಎಲ್ಲಿ ಎಂದು ಕೇಳಿದ್ದಾರೆ. ಆತ ಹೆಚ್ಚಿಗೆ ಮಾತನಾಡುತ್ತಿರಲಿಲ್ಲ. ಆದರೆ ಬೊರಿವಲಿ ಎಂದು ಪಿಸುಗುಟ್ಟಿದ್ದಾನೆ. ತಕ್ಷಣ ಬೊರಿವಲಿ ಪೊಲೀಸರನ್ನು ಸಂಪರ್ಕಿಸಿದ ಪೊಲೀಸರು ಕಸ್ತೂರ್ ಬಾ ಪೊಲೀಸ್ ಠಾಣೆಯಲ್ಲಿ ರಾಜೇಶ್ ಗುಪ್ತಾ ಎಂಬಾತ ಪತ್ನಿ ಮಕ್ಕಳು ನಾಪತ್ತೆಯಾಗಿರುವ ಕುರಿತು ದೂರು ನೀಡಿರುವುದನ್ನು ಕಂಡುಕೊಂಡಿದ್ದಾರೆ. ಬಳಿಕವಷ್ಟೇ ಮೃತ ಮಹಿಳೆಯ ಗುರುತು ಪತ್ತೆಯಾಗಿದೆ. 
ಬೊರಿವಲಿ (ಪೂರ್ವ)ದಲ್ಲಿರುವ ನಿವಾಸದಿಂದ ಪ್ರೀತಿ ಗುಪ್ತಾ (25) ಪುತ್ರ ಆರ್ಯನ್ (5) ಮತ್ತು ಪುತ್ರಿ ಆರಾಧನಾ(2) ಜತೆ ಆಕೆ ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಮನೆಯಿಂದ ಹೊರಟಿದ್ದಳು. ಈ ಕುರಿತು ಆಕೆ ಪತಿಗೆ ಏನೂ ಹೇಳಿರಲಿಲ್ಲ. ಮಧ್ಯರಾತ್ರಿ 1.30 ಕಳೆದರೂ ಪತ್ನಿ ಮನೆಗೆ ಬಾರದಿದ್ದಾಗ ಪತಿ ರಾಜೇಶ್ ಗುಪ್ತಾ ಕಸ್ತೂರ್ ಬಾ ಮಾರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. 

ಇದು ಆತ್ಮಹತ್ಯೆಯೋ, ಆಕಸ್ಮಿಕ ಅಪಘಾತವೋ ಎಂದು ತಿಳಿದು ಬಂದಿಲ್ಲ. ಮೃತಳ ಪತಿಯ ಹೇಳಿಕೆಯ ಬಳಿಕವಷ್ಟೇ ಸತ್ಯ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ವಿ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا