Urdu   /   English   /   Nawayathi

ಮಳೆ ಆರ್ಭಟ 3 ಸಾವು : ಜನಜೀವನ ಅಸ್ತವ್ಯಸ್ತ, ರೈತರ ಬೆಳೆ ನಷ್ಟ

share with us

ಮಂಗಳೂರು/ಚಿಕ್ಕಮಗಳೂರು: 07 ಜುಲೈ (ಫಿಕ್ರೋಖಬರ್ ಸುದ್ದಿ) ರಾಜ್ಯದ ಕರಾವಳಿ ಭಾಗದಲ್ಲಿ ಕೆಲ ದಿನಗಳಿಂದ ಬಿಡುವುಕೊಟ್ಟಿದ್ದ ಮಳೆ ಮತ್ತೆ ಅರ್ಭಟಿಸಿದ ಪರಿಣಾಮ,ದಕ್ಷಿಣ ಕನ್ನಡ, ಉಡುಪಿ, ಕೊಗಡು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು,ಮಳೆಗೆ ಪುತ್ತೂರಿನಲ್ಲಿ ಅಜ್ಜಿ,ಮೊಮ್ಮಗೆ ಬಲಿಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ರೈತ ಸಾವನ್ನಪ್ಪಿದ್ದಾರೆ.

  •  ಕರಾವಳಿಯಲ್ಲಿ ಮುಂದುವರಿದ ಮಳೆಯ ಆರ್ಭಟ
  •  ಗೋಡೆ ಕುಸಿದು ಅಜ್ಜಿ ಮೊಮ್ಮಗ ಸಾವು
  •  ಮೃತರಿಗೆ ತಲಾ ಎರಡು ಲಕ್ಷ ಪರಿಹಾರ
  •  ಶಾಲಾ ಕಾಲೇಜಿಗೆ ರಜೆ
  •  ಕೊಡು, ಚಿಕ್ಕಮಗಳೂರಿನಲ್ಲಿಯೂ ಧಾರಾಕಾರ ಮಳೆ
  •  ಬೆಳಗಾವಿಯಲ್ಲಿ ತುಂಬಿ ಹರಿಯುತ್ತಿರುವ ಸೇತುವೆ

ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಮೂಡಬಿದಿರೆಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ರಸ್ತೆ ಮತ್ತು ಕೃಷಿ ಭೂಮಿ ಜಲಾವೃತವಾಗಿದೆ. ನದಿಗಳು ಅಪಾಯ ಮಟ್ಟ ಮೀರಿ ಉಕ್ಕಿ ಹರಿಯುತ್ತಿವೆ.ಮೂಡಬಿದಿರೆ ಸೇರಿದಂತೆ ಸುಳ್ಯ,ಬೆಳ್ತಂಗಡಿ ತಾಲೂಕು, ಕೊಡುಗು ಜಿಲ್ಲೆ ಹಾಗು ಚಿಕ್ಕಮಂಗಳೂರಿನ ವಿವಿಧ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ತಡರಾತ್ರಿ ಸುರಿದ ಭಾರೀ ಮಳೆಗೆ ಪುತ್ತೂರಿನ ಹೆಬ್ಬಾರಬೈಲಿನಲ್ಲಿ ತಡೆಗೋಡೆ ಕುಸಿದು ಅಜ್ಜಿ, ಮೊಮ್ಮಗ ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಮಲಗಿದ್ದ ಪಾರ್ವತಿ(೭೦) ಮತ್ತು  ೧೧ ವರ್ಷದ ಮೊಮ್ಮಗ ಧನುಷ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪುತ್ತೂರು ಸಹಾಯಕ ಕಮಿಷನರ್ ಹೆಚ್. ಕೃಷ್ಣಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಗೋಣಿಬೈಲಿಲ್ಲಿ ೪೬ ವರ್ಷದ ರೈತ ಸುರೇಂದ್ರ ಮಳೆ ಹಿನ್ನೆಲಯಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಹಳ್ಳ ಕೊಳ್ಳ ತುಂಬಿ ಹರಿಯುತ್ತಿದ್ದು ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಬಂಟ್ವಾಳದ ತೆಂಕ ಕಜೆಕಾರ್‌ನಲ್ಲಿ ಮನೆಗೋಡೆ ಕುಸಿದಿದ್ದು,ಮನೆಮಂದಿ ಅಪಾಯದಿಮದ ಪಾರಾಗಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ನದಿ ತುಂಬಿ ಹರಿದಿದ್ದು ಸ್ನಾನಘಟ್ಟ ಮುಳುಗಡೆಯಾಗಿದೆ. ಉಪ್ಪಿನಂಗಡಿ-ಸುಬ್ರಹ್ಮಣ್ಯ ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಹೊಸ್ಮಠ ಸೇತುವೆಯೂ ಮುಳುಗಿದ್ದು ಕುಕ್ಕೆಗೆ ಆಗಮಿಸುವ ಭಕ್ತರಿಗೆ ತೊಂದರೆಯಾಗಿದೆ.

ನೇತ್ರಾವತಿ ಮತ್ತು ಕುಮಾರಧಾರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ನದಿ ದಡಕ್ಕೆ ತೆರಳದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.ಜಿಲ್ಲೆಯ ಹಲವೆಡೆ ಇನ್ನೂ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಳ್ತಂಗಡಿ ಸಮೀಪದ ಲಾಯಿಲ ಗ್ರಾಮದ ಗುರಿಂಗಾಣ ಎಂಬಲ್ಲಿ ರಸ್ತೆ ಬದಿಯ ಹಲಸಿನ ಮರವೂಂದು ಪಕ್ಕದ ಮನೆಯ ಮೇಲೆ ಬಿದ್ದು ರಮೇಶ್ ಎಂಬವರ ಮನೆಗೆ ಭಾಗಶಃ ಹಾನಿಯಾಗಿದೆ. ಅದೃಷ್ಯವಷಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ. ಭಾರೀ ಮಳೆಯ ಹಿನ್ನೆಲೆಯಲ್ಲಿ ಕುಡ್ತಮೊಗೇರು ಎಂಬಲ್ಲಿ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ವಿಟ್ಲ-ಸಾಲೆತ್ತೂರು ರಸ್ತೆ ಸಂಪೂರ್ಣ ಕಡಿತಗೊಂಡಿದೆ. ಮೂಡಬಿದ್ರೆಯ ಶಿರ್ತಾಡಿಯಲ್ಲಿ ರಸ್ತೆ ಜಲಾವೃತಗೊಂಡಿದ್ದು ವಾಹನಗಳ ಸಂಚಾರಕ್ಕೆ ಅಡಚಣೆಯುಂಟಾಗಿದೆ.

ಜಲಾವೃತ:

ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಮೂಡಿಗೆರೆ, ಚಾರ್ಮಾಡಿ, ಕಳಸ, ಕುದುರೆಮುಖ, ಶೃಂಗೇರಿ ಭಾಗದಲ್ಲಿ ಭಾರೀ ಮಳೆಯಿಂದ ಜನರ ನಿತ್ಯದ ಕೆಲಸಕ್ಕೆ ತೊಂದರೆಯಾಗಿದೆ.ಅಪಾಯದ ಮಟ್ಟ ಮೀರಿ ತುಂಗಾ, ಭದ್ರಾ ನದಿಗಳು ಹರಿಯುತ್ತಿವೆ. ಅಕ್ಕಪಕ್ಕದ ರಸ್ತೆ, ಜಮೀನುಗಳಿಗೆ ನುಗ್ಗಿದ ನದಿ ನೀರು ನುಗ್ಗಿದ್ದು, ಹಲವೆಡೆ ರಸ್ತೆ ಸಂಪರ್ಕ ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಹೊರನಾಡು ಸಮೀಪದ ಹೆಬ್ಬಾಳೆ ಸೇತುವೆ ಭದ್ರಾ ನದಿಯ ನೀರು ಅಪ್ಪಳಿಸುತ್ತಿದ್ದು, ಮುಳುಗಡೆ ಆಗುವ ಸಾಧ್ಯತೆ ಇದೆ. ಭದ್ರಾ ನದಿಯ ರಭಸ ನೋಡಿ ಪ್ರವಾಸಿಗರು ವಾಹನ ನಿಲ್ಲಿಸಿದ್ದಾರೆ. ಸದ್ಯಕ್ಕೆ ಕಳಸ ಹೊರನಾಡು ರಸ್ತೆ ಸಂಪರ್ಕ ಬಂದ್ ಆಗಿದೆ. ಕುದುರೆಮುಖ, ಕಳಸ, ಹೊರನಾಡು ಸುತ್ತಮುತ್ತ ಮಳೆ ಹಿನ್ನೆಲೆಯಲ್ಲಿ ಭದ್ರಾ ನದಿಯ ನೀರಿನ ಒಳಹರಿವು ಹೆಚ್ಚಳಗೊಂಡಿದೆ.

ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಜನರನ್ನು ತೊಂದರೆಗೆ ಸಿಲುಕಿಸಿದೆ. ಬಾರಿ ಮಳೆಗೆ ಹಳ್ಳ ಕೊಳ್ಳ ತುಂಬಿ ಹರಿಯುತ್ತಿದೆ. ಹೀಗಾಗಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದ್ದು ಮುಂದಿನ ಹಲವು ದಿನಗಳ ಕಾಲ ಬಾರೀ ಮಳೆಯಾಗುವ ಮುನ್ನೆಚ್ಚರಿಕೆ ನೀಡಲಾಗಿದೆ.

ಜನರಲ್ಲಿ ಆತಂಕ

ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಕೃಷ್ಣಾ ನದಿ ನೀರು ಉಕ್ಕಿ ಹರಿಯುತ್ತಿದೆ.ಭಾರಿ ಮಳೆಗೆ ಈಗಾಗಲೇ ಚಿಕ್ಕೋಡಿ ತಾಲೂಕಿನ ಯಡುರ ಮತ್ತು ಕಲ್ಲೋಳ ಗ್ರಾಮಗಳ ಮಧ್ಯದ ಸಂಪರ್ಕ ಸೇತುವೆ ಬ್ರಿಡ್ಜ್ ಕಂ ಬಾಂದಾರ ಮುಳುಗಡೆಯಾಗಿದೆ.

ಗ್ರಾಮದ ನಡುವೆ  ಸಂಪರ್ಕ ಸೇತುವೆ ಮುಳುಗಡೆಯಿಂದ ೧೦ ಕಿ.ಮಿ ಸುತ್ತುವರೆದು ಸಂಚಾರ ಮಾಡುತ್ತಿರುವ ಜನರು ಪರದಾಡುವಂತೆ ಆಗಿದೆ.ಇನ್ನು ಮಳೆ  ಹೀಗೆ ಮುಂದುವರೆದಲ್ಲಿ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುವ ಸಾಧ್ಯತ ಇದ್ದು ಬೆಳಗಾವಿ ಪ್ರದೇಶದ ಜನರಲ್ಲಿ ಆತಂಕ ಮೂಡಿದೆ.

5 ಲಕ್ಷ ರೂ. ಪರಿಹಾರ

ಪುತ್ತೂರಿನ ಹೆಬ್ಬಾರಬೈಲಿನಲ್ಲಿ ಮನೆಗೆ ತಡೆಗೋಡೆ ಕುಸಿದು ಇಬ್ಬರು ಮೃತಪಟ್ಟ ಕುಟುಂಬಕ್ಕೆ ಜಿಲ್ಲಾಡಳಿತ ತಲಾ ೫ ಲಕ್ಷ ಪರಿಹಾರ ಘೋಷಿಸಿದೆ. ಈ ಕುರಿತಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿರುವ ಸಚಿವ ಯುಟಿ ಖಾದರ್ ಮಳೆ ಪರಿಸ್ಥಿತಿ ಬಗ್ಗೆ ನಿಗಾ ಇಡಲು ಸೂಚನೆ ನೀಡಿದ್ದಾರೆ.

ಸಂ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا